Monday, December 10, 2012

ಹೈದರಾಬಾದ್: ಮೂರು ಕಾದಂಬರಿಗಳು



ನನ್ನ ಹೈದರಾಬಾದಿನ ಆಸಕ್ತಿ ಮುಂದುವರೆಯುತ್ತದೆ. ಹೀಗಾಗಿಯೇ ಅಷ್ಟೇನೂ ಒಳ್ಳೆಯದು ಅನ್ನಿಸದಿದ್ದರೂ ಆ ಬಗ್ಗೆ ಬಂದ ಪುಸ್ತಕಗಳನ್ನೆಲ್ಲಾ ಕೊಳ್ಳುತ್ತೇನೆ. ಇದು ಒಂದು ಥರದ ಕುತೂಹಲ, ಬೇಕೆಂದರೆ ಸ್ವಲ್ಪ ಚಟವೆನ್ನಿ. ಹೈದರಾಬಾದಿಗೆ ಸಾಧ್ಯವಾದಾಗಲೆಲ್ಲ ಹೋಗುವುದು ಆ ನಗರದ ಬಗ್ಗೆ ಓದುವುದು, ಬರೆಯುವುದು ನನಗೆ ಪ್ರಿಯ ಕಾಯಕ. ಆ ನಗರಕ್ಕೆ ಇರುವ ವಿಚಿತ್ರ ಚರಿತ್ರೆ ಯಾವಾಗಲೂ ನನ್ನ ಗಮನವನ್ನು ಸೆಳೆಯುತ್ತಲೇ ಇರುತ್ತದೆ. ಕಳೆದ ಹದಿನೈದು ವರ್ಷಗಳಲ್ಲಿ ನಾನು ಆ ಪ್ರಾಂತದ ಬಗ್ಗೆ ಸಿಕ್ಕಿದ್ದನ್ನೆಲ್ಲಾ ಓದಿದ್ದೇನೆ. ಹೀಗಾಗಿ ಅಲ್ಲಿಂದ ಬಂದ ಕಾದಂಬರಿಗಳನ್ನು ಓದದೇ ಇರಲಾಗಲಿಲ್ಲ. ಕಳೆದ ಕೆಲವು ದಿನಗಳಲ್ಲಿ ನಾನು ಮೂರು ಭಿನ್ನ ಕಾದಂಬರಿಗಳನ್ನು ಓದಿದೆ. ಮೂರೂ ಬೇರೆಯದಾಗಿಯೇ ಇವೆ. ಕಥಾನಕದಲ್ಲಿ ಮತ್ತು ನಿರೂಪಣೆಯಲ್ಲಿ ಸುಮಾರಾದ ವೈವಿಧ್ಯತೆ ಇದೆ - ಎಲ್ಲಕ್ಕೂ ಸಮಾನವಾದ ಕೊಂಡಿಯೆಂದರೆ ಅವು ಹೈದರಾಬಾದಿನಲ್ಲಿ ನಡೆವ ಕಥೆಗಳು ಅನ್ನುವುದಷ್ಟೇ. ಆ ಕಥೆಗಳು ನಡೆದ ಕಾಲಕ್ರಮಾನುಸಾರವಾಗಿ ಅವುಗಳ ಬಗ್ಗೆ ನಾನು ಇಲ್ಲಿ ಚರ್ಚಿಸುತ್ತೇನೆ... ನಾನು ಈ ಪುಸ್ತಕಗಳನ್ನು ಓದಿದ ಕ್ರಮವೂ ನಾನು ಅವುಗಳನ್ನು ಕಾಲಕ್ರಮಾನುಸಾರವಾಗಿಯೇ ಅನ್ನುವುದರಲ್ಲಿ ಯಾವ ಕಾಕತಾಳೀಯವೂ ಇಲ್ಲ.

ನಾನು ಚರ್ಚಿಸುವ ಮೊದಲ ಪುಸ್ತಕ ಜೀನತ್ ಫುತೇಹಲಿ ಬರೆದಿರುವ ಜೊಹ್ರಾ ಎಂಬ ಕಾದಂಬರಿ. ಈ ಕಾದಂಬರಿ ನಡೆಯುವುದು ಇಪ್ಪತ್ತನೆಯ ಶತಮಾನದ ಮೊದಲ ವರ್ಷಗಳ ಕಾಲಘಟ್ಟದಲ್ಲಿ. ಈ ಕಾದಂಬರಿ ಮೊದಲಿಗೆ
೧೯೫೧ರಲ್ಲಿ ಪ್ರಕಟವಾಗಿತ್ತು. ಮತ್ತೆ ೨೦೦೪ರಲ್ಲಿ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನವರು ಮರುಮುದ್ರಿಸಿದ್ದಾರೆ. ಈ ಆವೃತ್ತಿಯನ್ನು ಜೀನತ್‌ರ ಮಗಳು ರುಮಾನಾ ಸಂಪಾದಿಸಿದ್ದಾರೆ. ಒಂದು ರೀತಿಯಲ್ಲಿ ಈ ಪುಸ್ತಕ ನನಗೆ ನಿರಾಶೆಯುಂಟಮಾಡಿತೆಂದೇ ಹೇಳಬೇಕು. ಆಕ್ಸ್‌ಫರ್ಡ್‌ ಈ ಪುಸ್ತಕವನ್ನು ೫೦ ವರ್ಷಗಳ ನಂತರ ಮರುಮುದ್ರಿಸಿದೆ ಅಂದರೆ ಈ ಪುಸ್ತಕ ಭಿನ್ನವಾಗಿ, ಏನೋ ಗಹನವಾದ ವಿಚಾರವನ್ನೊಳಗೊಂಡಿದೆಯೆಂದು ಆಶಿಸುವುದು ಸಹಜವೇ. ಅದರಲ್ಲೂ ಕಾದಂಬರಿಗಳನ್ನು ಹೆಚ್ಚು ಪ್ರಕಟಿಸದ ಈ ಸಂಸ್ಥೆ ಇದನ್ನು ಕೈಗೊಂಡಿರುವುದರಿಂದ ಇದರ ಪ್ರಾಮುಖ್ಯತೆಯ ಬಗ್ಗೆ ನನಗೆ ಸ್ವಲ್ಪ ಭ್ರಮೆಯೇ ಇತ್ತನ್ನಬಹುದು. ಜೈಪುರದಲ್ಲಿ ಅಡ್ಡಾಡುತ್ತಿದ್ದಾಗ ಆಕ್ಸ್‌ಫರ್ಡ್‍ ಅಂಗಡಿ ಕಂಡು ಅಲ್ಲಿಗೆ ಹೋಗಿ ಈ ಪುಸ್ತಕವನ್ನು ನಾನು ಕೊಂಡೆ. ಮೊದಲೇ ಈ ಪುಸ್ತಕದ ಬಗ್ಗೆ ಓದಿದ್ದೆನಾದ್ದರಿಂದ ಹಾಗೂ ಇದನ್ನು ಕೊಳ್ಳಲು ನಾನು ಮಾಡಿದ ಪ್ರಯತ್ನವೂ ಸಾಮಾನ್ಯಕ್ಕಿಂತ ಹೆಚ್ಚಾಗಿದ್ದರಿಂದ ಈ ಪುಸ್ತಕದಿಂದ ನನಗಿದ್ದ ನಿರೀಕ್ಷೆ ತುಸು ಹೆಚ್ಚೆಂದೇ ಹೇಳಬೇಕು.

ಈ ಪುಸ್ತಕದಲ್ಲಿ ರಾಜವಂಶೀಯತೆಯ ಕೆಲ ಅಂಶಗಳಿವೆ ಹಾಗೂ ಅದಕ್ಕೆ ಸಂಬಂಧಿಸಿದ ಮಿತಿಗಳೂ ಇವೆ. ಬಹುಶಃ ಜೊಹ್ರಾ ಕಾದಂಬರಿ ಶ್ರೀಮಂತಿಕೆಯ ಬೂಟಾಟಿಕೆಯನ್ನ ಪ್ರತಿನಿಧಿಸುವುದರಿಂದ ವಿಮರ್ಶಕರ ಅಥವಾ ಓದುಗರ ಗಮನವನ್ನು ಸೆಳೆಯುದಿಲ್ಲವೇನೋ. ಇದು ಮನೆಯಲ್ಲಿ ಕೂತಿರುವ ಹೆಂಗಸರ ಚಡಪಡಿಕೆಯ ಕಾದಂಬರಿಯೇ? ಆದರೆ ಕಥೆಯ ಮೇಲ್ಪದರವನ್ನು ಕೆರೆದು ಪರ್ದಾದ ಹಿಂದಕ್ಕೆ ಹೋದಾಗ ನಮಗೆ ಜನಾನದ ಒಳಗಿನ ಬದುಕಿನ ದರ್ಶನವಾಗುತ್ತದೆ. ಸಾಮಾಜಿಕ ಕಟ್ಟಳೆಗಳಿಗನುಸಾರವಾಗಿ ತಮ್ಮ ದೇಹದ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿಕೊಳ್ಳಬಹುದಾದರೂ ಮನಸ್ಸಿನ ಮೇಲೆ ಯಾವ ಲಗಾಮೂ ಸಾಧ್ಯವಿಲ್ಲ ಎಂದು ಪುಸ್ತಕ ನಿರೂಪಿಸುತ್ತದೆ.

ಈ ಕಥೆ ಅದರ ಕಾಲಘಟ್ಟದ ದೃಷ್ಟಿಯಿಂದ ಮುಖ್ಯವಾದದ್ದು. ಈ ಕಥೆ ನಡೆಯುವುದು ಸ್ವಾತಂತ್ರ ಸಂಗ್ರಾಮದ ಕಾಲದಲ್ಲಿ [ಕಥೆಯಲ್ಲಿ ಗಾಂಧೀಜಿಯ ಪ್ರಸ್ತಾಪವೂ, ಸರೋಜಿನಿ ನಾಯುಡು ಕವಿತೆಗಳನ್ನು ಓದುವ ಘಟನೆಯೂ ಬರುತ್ತದೆ]. ಹೀಗಾಗಿ ಕಥೆಯಲ್ಲಿರುವ ಕಾಳಜಿಗಳೂ ವಿಷಯಗಳೂ ಆಗಿನ ಕಾಲಘಟ್ಟವನ್ನು ಪ್ರತಿನಿಧಿಸುತ್ತವೆ. ಕಥೆ ಪ್ರಾರಂಭವಾಗುವುದು ಬಷೀರನ ಜೊತೆ ಜೊಹ್ರಾಳ ಮದುವೆಯೊಂದಿಗೆ. ಮೇಲ್ಮುಖಕ್ಕೆ ಆ ಮದುವೆ ಸಂತೋಷವನ್ನುಂಟು ಮಾಡುವ ಮದುವೆಯಾಗಿರುವುದಲ್ಲದೇ, ಕೆಲ ಪಾತ್ರಗಳು ಕಾದಂಬರಿಯಲ್ಲಿ ಪ್ರವೇಶ ಮಾಡದಿದ್ದಲ್ಲಿ ಹಾಗೇ ಮುಂದುವರೆಯುತ್ತಿತ್ತೇನೋ ಅನ್ನಿಸುತ್ತದೆ. ಆದರೆ ಹಾಗಾದಲ್ಲಿ ಕಾದಂಬರಿ ಮುಂದುವರೆಯುವುದಾದರೂ ಹೇಗೆ? ಹೀಗಾಗಿ ಅವರ ಮಧುಚಂದ್ರಕ್ಕೆ ಮಸ್ಸೂರಿಗೆ ಬಷೀರ್ ಮತ್ತು ಜೊಹ್ರಾ ಹೋದಾಗ ಮೊದಲ ಘಟನೆ ನಡೆಯುತ್ತದೆ. ಮಸ್ಸೂರಿಯಲ್ಲಿ ಬಷೀರನ ಹಳೆಯ ಗೆಳೆಯನೊಬ್ಬನ ಭೇಟಿಯಾಗುತ್ತದೆ. ಅದರ ಜೊತೆಗೇ ಸಿರಾಜ್ ಎಂಬ ಯುವಕನ ಪರಿಚಯವೂ ಆಗುತ್ತದೆ. ಸಿರಾಜ್ ಯುವಕ, ಮದುವೆಯಾಗದವ, ಅವನತ್ತ ಜೊಹ್ರಾ ಆಸಕ್ತಿ ವಹಿಸುತ್ತಾಳೆ. ಮನೆಯೊಳಗಿನ ಬೇಸರವನ್ನು ಅವಳು ದೂರ ಮಾಡಬೇಕು. ದಿನವೆಲ್ಲಾ ಪರ್‍ದಾದಲ್ಲಿ ಕಳೆಯುವ ಅವಳಿಗೆ ಹೈದರಾಬಾದಿನಿಂದ ಹೊರ ಬಂದಾಗಲೇ ಸ್ವಲ್ಪ ಮುಕ್ತಿ. ಅದೇ ಸಮಯಕ್ಕೆ ಜೊಹ್ರಾ ಖುಲ್ಲಂ ಖುಲ್ಲಾ ಸಿರಾಜನಲ್ಲಿ ಆಸಕ್ತಿ ತೋರುವಂತೆಯೂ ಇಲ್ಲ. ತನ್ನ ಮಾನಸಿಕ ಚಡಪಡಿಕೆಗಳನ್ನು ಹೊರಹಾಕಲು ಅವಳಿಗೆ ಈ ರೀತಿಯ ಚಟುವಟಿಕೆಗಳೂ-ಆಸಕ್ತಿಗಳೂ ಅವಶ್ಯಕ. ಮಸ್ಸೂರಿಯ ಮಧುಚಂದ್ರ ಮುಗಿಯುತ್ತಿದ್ದಂತೆ ಸಿರಾಜನೂ ನಾಪತ್ತೆಯಾಗಿಬಿಡುತ್ತಾನೆ. 

ಹೈದರಾಬಾದಿಗೆ ವಾಪಸ್ಸಾದಾಗ ಅಲ್ಲಿ ಪ್ರತ್ಯಕ್ಷವಾಗುವವನ ಹಮೀದ್. ಹಮೀದನಿಗೆ ರಾಷ್ಟ್ರೀಯತೆ, ಎಡಪಂಥೀಯ ಧೋರಣೆಗಳಿವೆ. ಅವನಿಗೆ ಕಾವ್ಯದಲ್ಲಿ ಆಸಕ್ತಿಯಿದೆ. ಪುಸ್ತಕಗಳ ಬಗ್ಗೆ ಪ್ರೀತಿಯಿದೆ, ಆದರೆ ಅವನಿಗೆ ಹೇಳಿಕೊಳ್ಳುವಂಥಹ "ನೌಕರಿ" ಇಲ್ಲ. ಹಮೀದನ ಜೊತೆ ಹರಟೆ ಕೊಚ್ಚುವುದು ಜೊಹ್ರಾಳಿಗೆ ಇಷ್ಟವಾಗುತ್ತದೆ. ಯಾಕೆಂದರೆ ಬಷೀರನಿಗೆ ತನ್ನ ಕೆಲಸದ್ದೇ ವ್ಯಸನ ಹಾಗೂ ಅವನು ಆಸಕ್ತಿಕರ ಸಂಭಾಷಣೆಯನ್ನು ನಡೆಸಲಾರ. ಹೀಗೆ ಹಂತಹಂತವಾಗಿ ಜೊಹ್ರಾ ತಾನು ತನ್ನ ಭಾವನನ್ನೇ ಪ್ರೀತಿಸುತ್ತಿರಬಹುದೆನ್ನುವುದನ್ನು ಮನಗಾಣುತ್ತಾಳೆ. ಕಥನ ತಂತ್ರದ ಸಂಪ್ರದಾಯದ ಪ್ರಕಾರ ಇಂಥ ಗೊಂದಲಗಳು ಹೆಚ್ಚಿನಕಾಲದವರೆಗೆ ಜೀವಂತವಾಗಿರಬಾರದು. ಹೀಗಾಗಿ ಹಮೀದ ಅಲ್ಲಿಂದ ನಾಪತ್ತೆಯಾಗಬೇಕು.. ಹಾಗೆಯೇ ನಡೆಯುತ್ತದೆ. ಮತ್ತೆ ಯೂರೋಪಿನ ಪ್ರವಾಸದಲ್ಲಿ ತನಗೆ ನೃತ್ಯ ಹೇಳಿಕೊಟ್ಟ ಜಾಕ್ವಿಸ್ ಎನ್ನುವವನ ಪರಿಚಯವೂ ಆಗಿ ಜೊಹ್ರಾಳ ಜೊತೆ ಸ್ನೇಹವೂ ಆಗುತ್ತದೆ. ಆದರೆ ಆತ ಇವಳತ್ತ ಹೆಚ್ಚಿನ ಸಲಿಗೆ ತೋರಿಸಲು ಯತ್ನಿಸಿದಾಗ ಅವರು ಬೇರಾಗುತ್ತಾರೆ. ಜೊಹ್ರಾಳಿಗೆ ಮಾತು ಬೇಕು, ಲಲ್ಲೆ ಹೊಡೆಯಬಹುದು ಆದರೆ ಮೈಥುನ ಮಾತ್ರ ದೂರ. ಹೀಗೇ ಈ ಕಗ್ಗ ಮುಂದುವರೆದು ಜೊಹ್ರಾಳ ಸಾವಿನಲ್ಲಿ ಸುಖಾಂತಗೊಳ್ಳುತ್ತದೆ!
 

ಇದು ನಿಜಕ್ಕೂ ಅದ್ಭುತವಾದ ಕಥೆಯೇನೂ ಅಲ್ಲ. ಜೊಹ್ರಾ ಜೀವಿಸುತ್ತಿದ್ದ ಎರಡು ಭಿನ್ನ ಲೋಕಗಳನ್ನು ಅದು ಪ್ರತಿನಿಧಿಸುತ್ತದೆ. ಹೈದರಾಬಾದಿನಲ್ಲಿದ್ದಾಗ ಪರ್‌ದಾದ ಬಂಧನದಲ್ಲಿ, ಹೊರ ಹೋದಾಗ ಖುಲ್ಲಂಖುಲ್ಲಾ. ಅವಳಿಗೆ ತನ್ನ ಬೌದ್ಧಿಕ ಆಸಕ್ತಿಗಳನ್ನು ತಣಿಸುವ ಸಂಗಾತಿ ಬೇಕು. ಬಷೀರನಲ್ಲಿ ಆ ಗುಣವಿಲ್ಲ. ಪರದೆಯನ್ನು ದಾಟಿಹೋಗಬೇಕೆನ್ನುವುದೇ ಅವಳ ತರಾತುರಿ. ಅದೇ ಸಮಯಕ್ಕೆ ಅವಳಿಗೆ ಬಷೀರನಲ್ಲಿ ಯಾವ ಹುಳುಕೂ ಕಾಣಿಸುವುದಿಲ್ಲ. ಹೀಗೆ ಯಾವುದೇ ಪಾಪಭಾವವಿಲ್ಲದೇ ಎರಡೂ ಬದುಕುಗಳನ್ನು ಅವಳು ಅಡಚಣೆಗಳಿಲ್ಲದೇ ಜೀವಿಸುತ್ತಾಳೆ. ಸುತ್ತಲೂ ಸಂಕುಚಿತತೆ ತುಂಬಿರುವ ಪರಿಸರದಲ್ಲಿ ನಾವು ಬಷೀರನಲ್ಲಿ ಒಂದು ಪ್ರಗತಿಪರ ಧಾರಾಳ ಮನೋಭಾವವನ್ನು ಕಾಣುತ್ತೇವೆ. ಮೂಲತಃ ಈ ಕಥೆ ಹೇಳುವುದು - ಮದುವೆಯೇ ನಮ್ಮೆಲ್ಲ ಅವಶ್ಯಕತೆಗಳನ್ನು ಪೂರೈಸುವ ಫೋರಮ್ ಮಾಲ್ ಅಲ್ಲ ಅನ್ನುವ ವಿಚಾರ. ಆದರೆ ಪುಸ್ತಕದ ಆಸಕ್ತಿಯ ಅಂಶವೆಂದರೆ ಒಂದೇಕಾಲಕ್ಕೆ ತಮ್ಮ ಸಂಸ್ಕೃತಿಯನ್ನು ಬಿಡಲಾಗದ, ಆದರೆ ಅದೇ ಸಮಯಕ್ಕೆ ಪಾಶ್ಚಾತ್ಯೀಕರಣದತ್ತ ವಾಲಲು ಸಿದ್ಧವಿರುವ ಹೈದರಾಬಾದಿನ ಶ್ರೀಮಂತ ನವಾಬೀ ಕುಟುಂಬದ ದ್ವಂದ್ವವಾಗಿದೆ. ಆದರೆ ಈ ಪುಸ್ತಕದಲ್ಲಿ ನನ್ನನ್ನು ಅಲ್ಲಾಡಿಸಿಬಿಟ್ಟ ಕಲಕಿಬಿಟ್ಟ ಅಂಶ ಅದರ ಕಥಾವಸ್ತುವಿನ್ನಾಗಲೀ, ನಿರೂಪಣೆಯಲ್ಲಾಗಲೀ ಕಾಣಲಿಲ್ಲ. ಇದನ್ನು ಆಕ್ಸ್‌ಫರ್ಡ್ ಮತ್ತೆ ಯಾಕೆ ಪ್ರಕಟಿಸಿತು ಅನ್ನುವುದು ನನಗೆ ಅರ್ಥವಾಗುತ್ತಲೂ ಇಲ್ಲ.
 

ಈ ಪುಸ್ತಕ ಮುಗಿಸಿದ ನಂತರ ನನಗೆ ಅಮೀನುದ್ದೀನ್ ಖಾನರ "ಎ ಷಿಫ್ಟ್ ಇನ್ ದ ವಿಂಡ್" ಪುಸ್ತಕ ಹೈದರಾಬಾದಿನ ವಾಲ್ಡನ್‌ನಲ್ಲಿ ಕಂಡುಬಂತು.
 ಇದೂ ಹೈದರಾಬಾದೀ ನವಾಬೀ ಥಾಟಿನ ಹಿನ್ನೆಲೆಯಲ್ಲಿ ಬರೆದಿರುವ ಪುಸ್ತಕ. ಆದರೆ ಇಲ್ಲಿನ ಕಥೆಯ ಕಾಲಘಟ್ಟ ಸ್ವಾತಂತ್ರಾನಂತರದ ಕಾಲದ್ದಾಗಿದೆ. ಈ ಪುಸ್ತಕದಲ್ಲಿ ಅನೇಕ ಪಾತ್ರಧಾರಿಗಳು ತಮ್ಮ ಕಥೆಯನ್ನು ಆತ್ಮಕಥೆಯ ರೂಪದಲ್ಲಿ ನಿರೂಪಿಸುತ್ತಾರೆ. ಅವೆಲ್ಲವನ್ನೂ ಕೂಡಿ ಓದಿದಾಗ ಕಥೆಯ ಹಂದರ ನಮಗೆ ತಿಳಿಯುತ್ತದೆ. ಕಥೆಯ ಮೂಲ ಪಾತ್ರಧಾರಿ ಜಫರ್. ಅವನ ಜಗದ ಸುತ್ತ ಕಥೆ ತಿರುಗಾಡುತ್ತದೆ. ಕಥೆಯಲ್ಲಿ ಮೂಡಿಬರುವ ಸಂಬಂಧ ವಿಭಿನ್ನವಾಗಿವೆ. ಜೊಹ್ರಾಗಿಂತ ಹೆಚ್ಚಿನ ಸ್ವಾತಂತ್ರ ಈ ಸಮಾಜಕ್ಕಿದೆ, ಜನ ಮುಕ್ತಮನಸ್ಸಿನವರಾಗಿರುತ್ತಾರೆ ಹಾಗೂ ಅನೇಕ ಕುತೂಹಲಕಾರಿ ಘಟನೆಗಳು ಇಲ್ಲಿ ನಡೆಯುತ್ತವೆ. 

ಜಫರ್‍ನ ಈ ಜೀವನಯಾತ್ರೆಯಲ್ಲಿ ಅವನು ಮೂವ್ವರು ಭಿನ್ನ ಮಹಿಳೆಯರೊಂದಿಗೆ ಒಡನಾಡುತ್ತಾನೆ. ಅವನ ಮೊದಲ ಭೇಟಿಯಾಗುವುದು ಸಬ್ರೀನಾಳ ಜೊತೆ. ಸಬ್ರೀನಾ ಜಫರ್‌ನಿಗಿಂತ ಹಿರಿಯಳು, ಹಾಗೂ 
ಮದುವೆಯಾದವಳು. ಸಬ್ರೀನಾಳ ಗಂಡ ಡಾ.ಮರ್‍ಚಂಟ್ ಅವಳಿಗಿಂತ ವಯಸ್ಸಿನಲ್ಲಿ ಸಾಕಷ್ಟು ಹಿರಿಯರು. ಜಫರ್ ಸಬ್ರೀನಾಳತ್ತ ಒಲವು ತೋರಿಸುತ್ತಾನೆ, ಆದರೆ ಸಬ್ರೀನಾ ಮರ್‌ಚಂಟ್‍ನ್ನ ಬಿಡಲು ತಯಾರಿಲ್ಲ. ಹೀಗೆ ಈ ಸಂಬಂಧದ ವಿಫಲತೆಯ ದುಃಖದಲ್ಲಿ ಇರುವಾಗಲೇ ಅವನು ಅಸ್ಮಾಳನ್ನು ಭೇಟಿಯಾಗುತ್ತಾನೆ. ಒಂದು ರಾತ್ರೆಯ ಭೋಗಕ್ಕಾಗಿ ಅಸ್ಮಾಳನ್ನು ಜಫರನ ಬಳಿ ಕಳಿಸಲಾಗುತ್ತದೆ. ಅಸ್ಮಾಳಿಗೆ ತನ್ನ ವಿದ್ಯೆಗಾಗಿ ಹಣ ಬೇಕಾಗಿದೆ, ಅವಳು ಕಲಿತ ನಂತರ ಒಂದು ಶಾಲೆ ಆರಂಭಿಸುವ ಕನಸನ್ನು ಹೊತ್ತಿದ್ದಾಳೆ. ಹಿಂದಿ ಸಿನೇಮಾದೋಪಾದಿಯಲ್ಲಿ ಜಫರ್ ಅವಳ ಜೊತೆ ಮೈಗೂಡಿಸದೇ ಕೈಗೂಡಿಸಲು ಯತ್ನಿಸುತ್ತಾನೆ. ಅವಳಿಗೆ ಬೇಕಿದ್ದರ ಹಣ ಕೊಡುವುದಾಗಿ ಹೇಳುತ್ತಾನೆ. ಆದರೆ ಅಸ್ಮಾ ಅವನ ಹಣಕ್ಕೆ ಬದಲಾಗಿ ಅವನಲ್ಲೇ ಆಸಕ್ತಿಯನ್ನು ತೋರಿಸುತ್ತಾಳೆ. ಜಫರನಿಗೆ ಈ ಬಗ್ಗೆ ಸದ್ಯಕ್ಕೆ ಯಾವ ಆಸಕ್ತಿಯೂ ಇಲ್ಲ... ಹೀಗೇ ಮುಂದುವರೆದು ಜಫರ್ ಝೀಬಾಳನ್ನು ಮದುವೆಯಾಗುತ್ತಾನೆ. ಕಥೆ ಇಲ್ಲಿಗೇ ನಿಂತುಬಿಟ್ಟರೆ ಅದನ್ನು ಕಥೆ ಅನ್ನುವುದಾದರೂ ಹೇಗೆ? ಹೀಗಾಗಿ ನಾಪತ್ತೆಯಾಗಿದ್ದ ಅಸ್ಮಾ ತಾನು ಸ್ಥಾಪಿಸಿರುವ ಶಾಲೆಯೊಂದಿಗೆ ಕಥೆಯಲ್ಲಿ ಮತುಪ್ರತ್ಯಕ್ಷಳಾಗುತ್ತಾಳೆ. ಸಬ್ರೀನಾ ಜಫರನನ್ನು ಮದುವೆಯಾಗಲು ತಯಾರಾಗಿ ಮತ್ತೊಂದು ಎಂಟ್ರಿ ಕೊಡುತ್ತಾಳೆ. ಆದರೆ ಅದಕ್ಕೆಲ್ಲಾ ತಡವಾಗಿಬಿಟ್ಟಿದೆ. ಕಥೆಯಲ್ಲಿನ ಒಂದು ಆಸಕ್ತಿಕರ ತಿರುವೆಂದರೆ ಝೇಬಾಳ ತಂದೆ ಅಸ್ಮಾಳತ್ತ ಒಲವು ತೋರಿಸುತ್ತಾನೆ. ಈ ತಿರುವನ್ನೂ ಒಂದು ರೀತಿಯಲ್ಲಿ ಪರಿಹರಿಸಬೇಕಾಗಿದೆ. ಆತನಲ್ಲಿ ಅಸ್ಮಾಳಿಗೆ ಒಲವಿಲ್ಲ. ಈ ಮಧ್ಯೆ ಸಬ್ರೀನಾ ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಂಡುಬಿಡುತ್ತಾಳೆ!!

ಕಥೆ ತೀರಾ ಸಾಧಾರಣವಾದದ್ದು. ಈ ಬಗ್ಗೆ ಬರೆಯುವುದು ಏನನ್ನು? ಆದರೆ ಈ ಕಾಲಘಟ್ಟಕ್ಕೆ ಬಂದಾಗ ಹೈದರಾಬಾದಿ ನವಾಬಿ ಸಮಾಜ ಪರ್‌ದಾದ ಬಗೆಗಿನ ಆಲೋಚನೆಗಳಿಂದ ಹೊರಬಿದ್ದಿರುವುದನ್ನು ಕಾಣಬಹುದು. ಹೀಗಾಗಿ ನಾವು ಕಾಣುವುದು ಸಮಕಾಲೀನ ವಿಚಾರಧಾರೆಗಳನ್ನು ಮತ್ತು ವಿಶಾಲ ಮನೋಭಾವವನ್ನು. ಸಂಪ್ರದಾಯದ ಸಂಕುಚಿತತೆ ಈ ಕಾದಂಬರಿಯಲ್ಲಿ ಕಾಣಿಸುವುದಿಲ್ಲ. 

ಈ ಕಾದಂಬರಿ ೫೦ ಮತ್ತು ೬೦ರ ದಶಕವನ್ನು ಒಂದು ಸಣ್ಣ ಕಾಲಘಟ್ಟವಾಗಿ ಪರಿವರ್ತಿಸಿಬಿಡುತ್ತದೆ. ಆ ಕಾಲದಲ್ಲಿ ಹೈದರಾಬಾದ್ ಪ್ರಾಂತ್ಯ ಭಾರತದೊಂದಿಗೆ ವಿಲೀನವಾದದ್ದು, ತೆಲಂಗಾಣಾ ರೈತಾಂದೋಲನ ನಡೆದದ್ದು ಆಗ ನಡೆದ ಗಲಭೆಗಳು ಯಾವುದೂ ನಡೆದೇ ಇಲ್ಲವೇನೋ ಅನ್ನುವಂತೆ ನವಾಬಿ ಲೋಕದಲ್ಲಿ ಈ ಕಾದಂಬರಿ ಘಟಿಸಿಬಿಡುತ್ತದೆ. ಪೊಟ್ಟೆ ಶ್ರೀರಾಮುಲುವಿನಂತಹ ನಾಯಕರು ಭಾಷಾವಾರು ಪ್ರಾಂತಕ್ಕಾಗಿ ನಡೆಸಿದ ಆಂದೋಲನ, ಉಪವಾಸ ಕೈಗೊಂಡು ಪ್ರಾಣ ತ್ಯಾಗ ಮಾಡಿದ, ಉರ್ದು ಆ ರಾಜ್ಯದಿಂದ ಬುಡಮೇಲಾಗಬಹುದಾಗಿದ್ದ ಕಾಲಘಟ್ಟದಲ್ಲಿ ಈ ಕಥೆ ತನ್ನದೇ ಪುಟ್ಟ ಸುಂದರ ಲೋಕದಲ್ಲಿ ನಡೆದುಬಿಡುತ್ತದೆ. ಜೊಹ್ರಾದಲ್ಲಿ ಗಾಂಧಿ ಮತ್ತು ಸರೋಜಿನಿ ನಾಯುಡು ಅವರ ಹೆಸರು ಒಮ್ಮೆ ಬಂದರೆ ಈ ಕಾದಂಬರಿಯಲ್ಲಿ ಬರುವ ಚಾರಿತ್ರಿಕ ಅಂಶವೆಂದರೆ - ಹೈದರಾಬಾದನ್ನು ಭಾರತಕ್ಕೆ ಸೇರಿಸಲು ನಡೆಸಿದ ಪೋಲಿಸ್ ಕಾರ್ಯಾಚರಣೆಯ ಮಾತು - ಅದೂ ಯಾರದ್ದೋ ವಯಸ್ಸನ್ನು ನಿರ್ಧರಿಸಲು - ಮಾತ್ರ ಬರುತ್ತದೆ.


ಹೈದರಾಬಾದಿನಲ್ಲಿ ಘಟಿಸುವ ಕಾದಂಬರಿಗಳೆಲ್ಲಾ ಹೀಗೇ ಖುಷಿಖುಷಿಯಾಗಿ ಜಗತ್ತಿನ ಪರಿವೆಯೇ ಇಲ್ಲದೇ ಬರುತ್ತವೆಯೇ ಅನ್ನುವ ಪ್ರಶ್ನೆ ನನ್ನನ್ನು ಕಾಡುವ ಮೊದಲೇ, ಮೂರನೆಯ ಪುಸ್ತಕ ನನ ಕೈ ಸೇರಿತು.
 ಸಾಮಿನಾ ಅಲಿ ಬರೆದ "ಮೆಡ್ರಾಸ್ ಆನ್ ರೈನೀ ಡೇಸ್" ಅನ್ನುವ ಈ ಪುಸ್ತಕ ಹೆಚ್ಚು ಸಮಕಾಲೀನವಾದದ್ದು. ಹೆಸರು ಸೂಚಿಸುವಂತೆ ಈ ಕಾದಂಬರಿಗೂ ಮದರಾಸಿನ ಮಳೆಗೂ ಏನು ಸಂಬಂಧವಿಲ್ಲ. ಇದೂ ಒಂದು ಅಪ್ಪಟ ಹೈದರಾಬಾದೀ ಕಾದಂಬರಿ. ಇದನ್ನ ನಾನು ಬೆಂಗಳೂರು ಏರ್‍ಪೋರ್ಟ್ ನಲ್ಲಿರುವ ಶಂಕರ್‍ಸ್ ನಲ್ಲಿ ಕೊಂಡೆ. ಸದ್ಯ ಈ ಲೇಖಕಿ ರಾಜವಂಶದವಳಲ್ಲ, ನವಾಬಿ ಹಿನ್ನೆಲೆಯಿಂದ ಬಂದವಳಲ್ಲ. ಕಾದಂಬರಿಯ ಕಾಲಘಟ್ಟ ೯೦ರ ದಶಕದ್ದು. ಈ ಕಾದಂಬರಿ ವಾಸ್ತವದ ಜೊತೆಗೆ ಹೆಚ್ಚಿನ ಕೊಂಡಿಗಳನ್ನು ಹಾಕಿಟ್ಟಂತೆ ಕಾಣಿಸುತ್ತದೆ ಸಂಬಂಧಗಳನ್ನು ಪದರ ಪದರವಾಗಿ ನೋಡುವ ಯತ್ನ ಮಾಡುತ್ತದೆ. ಚಿತ್ರಾ ದಿವಾಕರುಣಿ ಈ ಪುಸ್ತಕದ ಬಗ್ಗೆ ಬರೆಯುತ್ತಾ "ಈ ಕಥೆ ಎರಡು ಪ್ರಪಂಚಗಳಲ್ಲಿ ಜೀವಿಸುವ ನಮ್ಮಂತಹವರ ಗೊಂದಲಗಳ ಬಗೆಗಿನೆ ತೀವ್ರ ಅರಿವು ಮತ್ತು ಮನೋವೈಜ್ಞಾನಿಕ ಒಳನೋಟಗಳಿಂದ ಕೂಡಿದೆ" ಅನ್ನುತ್ತಾರೆ. ನನಗೆ ಇದರಲ್ಲಿ ಗಹನವಾದ ಮನೋವೈಜ್ಞಾನಿಕ ಒಳನೋಟಗಳೇನೂ ಕಾಣಲಿಲ್ಲ. ಪುಸ್ತಕಗಳನ್ನು ಬೆನ್ನುಡಿಗಳಾಧಾರದ ಮೇಲೆ ಕೊಂಡು ಕೊಳ್ಳುವುದರಲ್ಲಿರುವ ಅಪಾಯದ ಸೂಚನೆ ಇದು. ಅಷ್ಟೇ. ಆ ಆಧಾರದ ಮೇಲೆ ನಾವು ಪುಸ್ತಕಗಳನ್ನು ಕೊಳ್ಳುವ ಮೂರ್ಖತೆಯನ್ನು ಮಾಡಬಾರದು. ಆದರೆ ಮೇಲೆ ಚರ್ಚಿಸಿದ ಎರಡು ಸಪಾಟು ಪುಸ್ತಕಗಳಿಗಿಂತ ಈ ಪುಸ್ತಕ ಭಿನ್ನವಾಗಿತ್ತೆಂದು ಹೇಳಬೇಕು. ಮೊದಲೇ ಹೇಳಿದಂತೆ ಈ ಕಥೆ ಸಂಬಂಧಗಳ ಒಳಪದರಗಳನ್ನು ಪರೀಕ್ಷಿಸಲು ಪ್ರಯತ್ನಿಸುತ್ತದೆ. ಒಂದು ಅಮೆರಿಕನ್ ಬಾರ್ನ್ ಕನ್‍ಫ್ಯೂಸ್ಡ್ ದೇಸಿ [ಎಬಿಸಿಡಿ] ದೃಷ್ಟಿಯಿಂದ ಹೈದರಾಬಾದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. 

ಈ ಕಥೆ ಲೈಲಾಳದ್ದು. ಲೈ
ಲಾ ಅಮೆರಿಕದಲ್ಲಿ ಬೆಳೆದವಳು. ಭಾರತದಲ್ಲಿ "ಅರೇಂಜ್ಡ್ ಮ್ಯಾರೇಜ್" ಮಾಡಿಕೊಳ್ಳಲು ಇಲ್ಲಿಗೆ ಬರುತ್ತಾಳೆ. ಅವಳ ತಂದೆ ತಾಯಿ ಬೇರಾಗಿದ್ದಾರೆ. ಆತ ಬೇರೊಬ್ಬಳನ್ನು ಇಟ್ಟುಕೊಂಡಿದ್ದಾನೆ.ಮೊದಲಿನಿಂದಲೂ ಹಳೆಯ ರಿವಾಜುಗಳನ್ನು ಮುರಿಯುವ ಆಸಕ್ತಿ ಲೈಲಾಳಿಗೆ ಇರುವಂತಿದೆ. ಇಲ್ಲಿಗೆ ಬರುವ ಮುನ್ನವೇ ನೇಟ್ ಜೊತೆ ಅವಳಿಗೆ ಸಂಬಂಧವಿರುತ್ತದೆ. ಆದರೆ ಅದನ್ನು ಮುಂದುವರೆಸುವ ಆಸಕ್ತಿ ಅವಳಿಗಿಲ್ಲ - ಅದಕ್ಕೆ ಕಾರಣ ನೇಟ್ ಬರೆಯುವ ಪತ್ರಗಳು ಸದಭಿರುಚಿಯದ್ದಾಗಿರುವುದಿಲ್ಲ. ಅದೇ ಸಮಯಕ್ಕೆ ಅವಳಿಗೆ ಸಮೀರನನ್ನು ಮದುವೆಯಾಗುವ ಉತ್ಸಾಹವಾಗಲೀ ಆಸಕ್ತಿಯಾಗಲೀ ಇಲ್ಲವೇ ಇಲ್ಲ. ಅವಳ ತಾಯಿಗೆ ಇವಳ ಮನಸ್ಸಿನಲ್ಲಿರುವ ದುಷ್ಟ ಯೋಚನೆಗಳನ್ನು ನಿರ್ಣಾಮ ಮಾಡಬೇಕೆನ್ನುವ ಯೋಚನೆ. ಹೀಗಾಗಿ ಅವಳನ್ನು ಹೈದರಾಬಾದಿನ ಒಬ್ಬ ಆಲಿಂನ ಬಳಿ ಕರೆದೊಯ್ಯುತ್ತಾಳೆ. ಆತ ಇವಳ ಭೂತವನ್ನೆಲ್ಲಾ ಕಂಡುಕೊಂಡಂತೆ ಪ್ರವರ್ತಿಸಿದರೂ ಅವಳನ್ನು ತೊಂದರೆಗೆ ಸಿಲುಕಿಸುವುದಿಲ್ಲ. ಆದರೆ ಲೈಲಾಳಿಗೆ ಸಮೀರನನ್ನು ಮದುವೆಯಾಗದೇ ಇರುವ ಸ್ವಾತಂತ್ರ ಇದೇಯೇ.. ಬಹುಶಃ ಇಲ್ಲ. ಹೀಗಾಗಿ ಅವಳು ಅವನನ್ನು ಒಪ್ಪಿ ಹೊಸಜೀವನವನ್ನು ಆರಂಭಿಸಲು ತಯಾರಾಗುತ್ತಾಳೆ. ಮೊದಲಿಗೆ ಅವನಿಗೆ ತನ್ನ ಚರಿತ್ರೆಯೆಲ್ಲವನ್ನೂ ನಿರೂಪಿಸಿ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾಳೆ. ಸಮೀರ ಇದನ್ನು ಒಪ್ಪಿದಂತೆ, ಕ್ಷಮಿಸಿದಂತೆ, ಮತ್ತು ಇಲ್ಲಿಂದ ಜೀವನವನ್ನು ಮುಂದುವರೆಸುವ ಆಸಕ್ತಿ ಉಳ್ಳವನಂತೆ ಕಾಣುತ್ತಾನೆ. ಅವನಿಗಿರುವ ಒಂದೇ ಗುರಿಯೆಂದರೆ ಹೈದರಾಬಾದಿನಿಂದ ಹೊರಬಿದ್ದು ಅಮೆರಿಕವನ್ನು ತಲುಪಬೇಕು ಅನ್ನುವುದಷ್ಟೇ. ಹೀಗಾಗಿ ಅವರು ಮದರಾಸಿಗೆ ಕೈಗೊಳ್ಳುವ ಯಾತ್ರೆ ಕೇವಲ ಮಧುಚಂದ್ರಕ್ಕಲ್ಲದೇ ಅವನ ವೀಸಾಗಾಗಿಯೂ ಆಗಿರುತ್ತದೆ. 
ಎಲ್ಲವೂ ಒಂದು ಹದ್ದುಬಸ್ತಿಗೆ ಬರುತ್ತಿದೆ ಅನ್ನುವಾಗಲೇ ಮದ್ರಾಸಿನಲ್ಲಿ ಮಳೆಯಾಗುತ್ತದೆ. ಅದು ಮಳೆಯಲ್ಲ ಜಡಿಮಳೆ. ಹೊರಗೆ ಮಳೆಯಾಗುತ್ತಿದ್ದಂತೆ, ಅವರ ಮದುವೆ ಪರಾಕಾಷ್ಟೆಗೆ ಸೇರುವಮುನ್ನವೇ, ಮಳೆಯ ನಡುವೆ ಸಮೀರ್ ಸಲಿಂಗರತಿಯಲ್ಲಿ ತೊಡಗುತ್ತಾನೆಂದು, ಅವನೆ "ಗೇ" ಎಂದೂ ಅವಳಿಗೆ ತಿಳಿಯುತ್ತದೆ. ಮದರಾಸಿನಲ್ಲಿ ತನ್ನ ಮನಸ್ಸನ್ನು ಕಾಡುತ್ತಿರುವ ಭೂತಗಳನ್ನು ದೂರಮಾಡಲೇ ಎಂಬಂತೆ ಮತ್ತೊಬ್ಬ ಆಲಿಂ ಪ್ರತ್ಯಕ್ಷನಾಗುತ್ತಾನೆ. ಅಲ್ಲಿಂದ ಸಂಬಂಧಗಳ ಅಭೇಧ್ಯ ಮಾಯಾಜಾಲದಲ್ಲಿ ಅವಳು ಸಿಲುಕಿಕೊಳ್ಳುತ್ತಾಳೆ. ಒಮ್ಮೆ ಆ ಮದುವೆಯ ರಾದ್ಧಾಂತವೆಲ್ಲಾ ಮುಗಿಯಿತು ಅನ್ನಿಸುತ್ತದೆ. ಮತ್ತೊಮ್ಮೆ ಅವರು ಮತ್ತೆ ಆ ಸಂಬಂಧವನ್ನು ಪುನರ್ನಿರ್ಮಿಸಿಕೊಳ್ಳುತ್ತಿದ್ದಾರೆ ಅನ್ನಿಸುತ್ತದೆ. ಹೀಗೆ ಡೋಲಾಯಮಾನವಾಗಿ ಲೋಲುಕ ನಿರಂತರವಾಗಿ ತೂಗುತ್ತಿರುತ್ತದೆ. ಸಾಮಿನಾ ಅಲಿ ಹೀಗೆ ಮನದ ಮರ್ಕಟದ ಆಳಕ್ಕೆ ಇಳಿಯುತ್ತಾ ತಮ್ಮ ದಿಕ್ಕನ್ನು ಕಳೆದುಕೊಂಡುಬಿಡುತ್ತಾರೆ. ಆಕೆ ಹೈದರಾಬಾದಿನ ಕೋಮುಗಲಭೆ, ನಗರದ ಸಂಸ್ಕೃತಿ ಮುಖ್ಯವೋ ಅಥವಾ ಈ ಸಂಬಂಧಗಳು ಮುಖ್ಯವೋ ಅನ್ನುವ ದ್ವಂದ್ವವನ್ನು ಪರಿಹರಿಸಿಕೊಳ್ಳಲಾರದೇ ತಬ್ಬಿಬ್ಬಾಗುತ್ತಾರೆ. ಹೀಗೆ ಕಥೆಯನ್ನು ಜಟಿಲಗೊಳಿಸುತ್ತಾ ಹಿಗ್ಗೆಸುತ್ತಾ ಸಾಮಿನಾ ಮುಂದುವರೆಯುತ್ತಾರೆ. ಹೀಗಾಗಿಯೇ ಒಂದು ಕೋಮುಗಲಭೆಯನ್ನು ಸೃಷ್ಟಿಸಿ ಒಂದಿಬ್ಬರನ್ನು ಕೊಂದ ಹೊರತು ಕಥೆಯನ್ನು ಆಕೆಯ ಒಂದು ಹದ್ದುಬಸ್ತಿಗೆ ತರುತ್ತಾರೆ.ಆದರೆ ಹಳೇ-ಹೊಸ ನಗರಗಳ ನಡುವಿನ ತುಮುಲಗಳನ್ನು ಸಂಸ್ಕೃತಿಯನ್ನು ಮನೆಯೊಳಗಲ್ಲದೇ ಒಂದು ಸಾಮಾಜಿಕ ನೆಲೆಯಲ್ಲಿ ಅರ್ಥಮಾಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನದಲ್ಲಿ ಆಕೆ ಮಿಕ್ಕೆರಡು ಪುಸ್ತಕಗಳ ಬರಹಗಾರರಿಗಿಂತ ಭಿನ್ನವಾಗು ಕಾಣುತ್ತಾರೆ. ಹೀಗಾಗಿ ಹೈದರಾಬಾದ್ ನಗರವನ್ನು ಆಕೆ ಹೆಚ್ಚು ಪರಿಪೂರ್ಣತೆಯಿಂದ ಗ್ರಹಿಸಿದ್ದಾರೆ ಅನ್ನಿಸುತ್ತದೆ. ಹೈದರಾಬಾದಿನ ಬಗ್ಗೆ ಆಕೆ ಕೊಡುವ ವಿವರಗಳು ದಟ್ಟವಾಗಿವೆ ಹಾಗೂ ಸತ್ಯದ ಬುನಾದಿಯ ಮೇಲೆ ನಿಂತಿವೆ. ಹೀಗಾಗಿಯೇ ಆ ನಗರದ ಬಗ್ಗೆ ಭಾವನಾತ್ಮಕ ಆಸಕ್ತಿ ಇರುವ ನನ್ನಂತಹವರ ಕೈಯಲ್ಲಿ ಈ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. 

ಈ ಮೂರೂ ಪುಸ್ತಕಗಳು ಸಾಧಾರಣ ಪುಸ್ತಕಗಳು ಮಾತ್ರ. ಇವುಗಳ ಬಗೆಗೆ ಬಿಡಿಯಾಗಿ ಬರೆಯಬೇಕಾದ ಅವಶ್ಯಕತೆ ನನಗೆ ಕಂಡಿರಲಿಲ್ಲ. ಅವುಗಳಿಗೆ ಇಷ್ಟು ದೀರ್ಘವಾಗಿ ಪ್ರಬಂಧ ಬರೆಸಿಕೊಳ್ಳುವ ಅರ್ಹತೆ ನನಗೆ ಕಾಣದಿದ್ದರೂ, ಅವುಗಳನ್ನು ಒಟ್ಟಾಗಿ ಓದಿದಾಗ, ಅವುಗಳ ಕಾಲಘಟ್ಟಗಳನ್ನು ಅವಲೋಕಿಸಿದಾಗ ನನಗೆ ತಟ್ಟಿದ್ದೆಂದರೆ ಮೂರೂ ಪುಸ್ತಕಗಳನ್ನು ಭಿನ್ನ ಲೇಖಕರು ಬರೆದಿದ್ದರೂ ಅದು ಪ್ರತಿನಿಧಿಸುತ್ತಿರುವುದು ಅರ್ಧ ಶತಮಾನದ ಸಂಬಂಧಗಳ ಸಾರವನ್ನು. ಮೂರೂ ಕಾದಂಬರಿಗಳನ್ನು ಬರೆದವರು ಶ್ರೀಮಂತ ಹಿನ್ನೆಲೆ-ಶ್ರೀಮಂತ ಸಮಾಜವನ್ನು ಪ್ರತಿನಿಧಿಸುವವರು. ಅವರು ಪರ್‌ದಾದ ಹಿಂದಿನಿಂದ ಬಿಡುಗಡೆಯಾಗಬೇಕೆಂದು ತಹತಹಿಸುತ್ತಿರುವವರು, ಮದುವೆಯಾಚೆಗಿನ ಸಂಬಂಧಗಳ ಬಗ್ಗೆ ಪ್ರಬುದ್ಧವಾಗಿ ಆಲೋಚಿಸಲೆತ್ನಿಸುತ್ತಿರುವವರು, ಸಲಿಂಗ ರತಿ, ವಿಲಕ್ಷಣ ರತಿಯಬಗ್ಗೆ ಅಲೋಚಿಸಬಲ್ಲವರು.. ಮತ್ತದೇ ಸಮಯಕ್ಕೆ ಸಂಬಂಧಗಳಲ್ಲಿ ಒಂದುಬಗೆಯ ಘನತೆ ಇಲ್ಲದಾಗ ಅತೀವ ದುಃಖ ಪಡುವವರು. ಈ ಅರ್ಧ ಶತಮಾನದಲ್ಲಿ ಈ ಸಮಾಜದ ಆಲೋಚನಾಲಹರಿ ಬದಲಾದದ್ದನ್ನು ಈ ಮೂರೂ ಪುಸ್ತಕಗಳನ್ನು ಒಟ್ಟಿಗೆ ಓದಿದಾಗ ನಮಗೆ ಗ್ರಹಿಸಲು ಸಾಧ್ಯವಾಗುತ್ತದೆ.


ಈ ಮೂರೂ ಪುಸ್ತಕಗಳನ್ನು ಮಾರುಕಟ್ಟೆಗೆ ಇಳಿಸಿದ ವಿಧಾನದ ಬಗ್ಗೆಯೂ ನಾವು ತುಸು ಅವಲೋಕಿಸಬೇಕಾಗಿದೆ. ಜೊಹ್ರಾಳನ್ನು ನಾನು ಹುಡುಕಿ ಹೊರಟೆ. ಅದನ್ನು ಪಡೆಯಲು ನಾನು ಮಾಡಿದ ಪ್ರಯತ್ನ ಯಾವುದೋ ಕಾದಂಬರಿಯನ್ನು ಹುಡುಕಿ ಹೊರಟವ ಮಾಡುವ ಪ್ರಯತ್ನವಲ್ಲ, ಬದಲಿಗೆ ಅಮೂಲ್ಯ ಹಳೆಯ ಗ್ರಂಥವನ್ನು ಹುಡುಕಿ ಹೊರಟಂತೆ ನಾನು ಅದಕ್ಕಾಗಿ ಹುಡುಕಿದೆ. ಅದನ್ನು ಕ್ರಾಸ್‍ವರ್ಡ್ ನಂಥಹ ಪುಸ್ತಕದಂಗಡಿಯ 'ಹೊಸ ಪುಸ್ತಕಗಳ' ವಿಭಾಗದಲ್ಲಿ ಕಾಣಲಿಲ್ಲ, ಏರ್‍ಪೋರ್ಟ್‌‍ನಲ್ಲಿ ಅದು ಸಿಲಿಲ್ಲ. ಷಿಫ್ಟ್ ಇನ್ ದ ವಿಂಡ್ ಇನ್ನಷ್ಟು ಹೆಚ್ಚು ಜಾಗಗಳಲ್ಲಿ ಲಭ್ಯವಿತ್ತು. ಲೇಖಕರ ಸಂದರ್ಶನ ಹಿಂದೂ ಪತ್ರಿಕೆಯಲ್ಲಿ ಬಂದಿತ್ತು, ಒಂದೆರಡು ವಿಮರ್ಶೆಗಳೂ ಲಭ್ಯವಿದ್ದುವು. ಆದರೆ ಇದು ಭಾರತದಲ್ಲೇ ಬರೆದ, ಇಲ್ಲೇ ಮಾರಾಟವಾಗುವ ದೇಸೀ ಪುಸ್ತಕವಾಗಿತ್ತು. ಮೆಡ್ರಾಸ್ ಆನ್ ರೈನೀ ಡೇಸ್ ವಿಶ್ವದಾದ್ಯಂತ ಬಿಡುಗಡೆಯಾಯಿತು. ಭಿನ್ನ ಪ್ರಾಂತಗಳಲ್ಲಿ ಭಿನ್ನ ಮುಖಪುಟದೊಂದಿಗೆ ಬಂತು. ಆ ಕಾದಂಬರಿಯ ಭಾಗಗಳನ್ನು ಲೇಖಕಿ ಅನೇಕ ಕಡೆ ಓದಿ, ಮಾರಾಟವಾದ ಪುಸ್ತಕಗಳ ಮೇಲೆ ತನ್ನ ಸಹಿ ಹಾಕುವ ಕಾರ್ಯಕ್ರಮಗಳೂ ನಡೆದುವು. ಕ್ಯಾಲಿಫೋರ್ನಿಯಾದ ಒಂದು ಸ್ಥಳೀಯ ಬಹುಮಾನಕ್ಕಾಗೆ ಅದನು ಪರಿಗಣಿಸಲಾಗಿಯೂ ಇತ್ತು. 

ನೀವು ಲೇಖಕರಾಗಿದ್ದರೆ, ಎಲ್ಲಿ ಇರಬಯಸುತ್ತೀರಿ??

No comments:

Post a Comment